ಮಂಗಳವಾರ, ಮಾರ್ಚ್ 17, 2015

ಕುಂಟು ಮನ

ಕುಂಟನೊಬ್ಬ ರಸ್ತೆ ದಾಟುತಿದ್ದ
ಹಳೆ ನೆನಪುಗಳ ಕನವರಿಸುತಿದ್ದ

ಬಾಲ್ಯದ ನೆನಪಿನಲೂ ಅವ ಕುಂಟ
ಆದರೂ ಯಾರೂ ಹಿಡಿಯಲಾರದ ತುಂಟ
ಹೊರ ಪ್ರಪಂಚವನರಿಯದ ವಯಸದು
ಮಿತಿಯನರಿಯಲಾರದ ಮನಸದು

ಕುಂಟನೊಬ್ಬ ರಸ್ತೆ ದಾಟುತಿದ್ದ
ಹಳೆ ನೆನಪುಗಳ ಕನವರಿಸುತಿದ್ದ

ಕಾಲ ಕಳೆದಂತೆ ಸಂತೋಷ ಕಮರಿತು
ಮಿತಿಯ ಅರಿವು ಮತಿಗಾಯಿತು
ಮೊದಮೊದಲು ಎಲ್ಲರಂತೆ  ಬೆರೆಯುತಿದ್ದ
ಆದರೆ ಉಳಿದವರು ಮೇಲೆಂಬ ಭಾವನೆ ಬರಲು ಕ್ಷೀಣಿಸಿದ್ದ

ಕುಂಟನೊಬ್ಬ ರಸ್ತೆ ದಾಟುತಿದ್ದ
ಹಳೆ ನೆನಪುಗಳ ಕನವರಿಸುತಿದ್ದ

ದೇಹದ ಬೇಲಿ ಮನಸಿಗತ್ತಿತು
ಕೀಳರಿಮೆ , ನಿಸ್ಸಹಾಯಕತೆ ಮನವ ತುಂಬಿತು
ಆತ್ಮಸ್ಥೈರ್ಯ ಪಾತಾಳ ಹೊಕ್ಕಿತು
ಪರಾವಲಂಬಿ ಬದುಕಾಯಿತು

ಕುಂಟನೊಬ್ಬ ರಸ್ತೆ ದಾಟುತಿದ್ದ
ಹಳೆ ನೆನಪುಗಳ ಕನವರಿಸುತಿದ್ದ

ಆದರಿಂದು ರಸ್ತೆ ಬಳಿ ಗೆಳೆಯನಿಗೆ ಕಾಯುತಿರಲು
ಟಕ್ ಟಕ್   ಕೋಲಿನ ಶಬ್ದ, ಏನೆಂದು ತಿರುಗಿ ನೋಡಲು
ಕರಿ ಕನ್ನಡಕದಾರಿ ಬಾಡಿದ ಮುಖವೊಂದು ಸಹಾಯ ಕೇಳಿತ್ತು
ರಸ್ತೆ ದಾಟಲಾರದಂತೆ ಚಲಿಸುತ್ತಿರುವ ವಾಹನಗಳ ಶಬ್ದ ಕೇಳಿ ಬೆದರಿತ್ತು

ಕುಂಟನೊಬ್ಬ ರಸ್ತೆ ದಾಟುತಿದ್ದ
ಹಳೆ ನೆನಪುಗಳ ಕನವರಿಸುತಿದ್ದ

ಕ್ಷಣ ಮಾತ್ರದಲಿ ಹೆಗಲಿಗೆ ಹೆಗಲು ಸೇರಿತ್ತು
ಕುರುಡನಿಗೆ ಕಣ್ಣಾಗಿ ಕುಂಟನ ನಡೆ ಸಾಗುತಿತ್ತು
ಇದೇ ಮೊದಲ ಬಾರಿಗೆ ಕುಂಟನೂ  ಸಹ ಪರ ಸಹಾಯವಿಲ್ಲದೆ ರಸ್ತೆ ದಾಟುತಿದ್ದ
 ತನಗೆ ತಾನೇ ಎಳೆದುಕೊಂಡ ಮನದ ಮಿತಿಯ ಮುರಿಯುತಿದ್ದ

ಕುಂಟನೊಬ್ಬ ರಸ್ತೆ ದಾಟುತಿದ್ದ ,ಇನ್ನೊಬ್ಬನ ದಾಟಿಸುತಿದ್ದ
ತನ್ನ ಮನೋರೋಗವ ತೊರೆದು ಪುನಃ ಬಾಲ್ಯದ ಮಂದಹಾಸ ಬೀರುತಿದ್ದ

ಶುಕ್ರವಾರ, ಮಾರ್ಚ್ 13, 2015

ಚಾರಣಿಗರು

ರಾಜು ಸೀನು ಮಾಣಿಯೆಂಬ ಜಾಲಿ ಗೆಳೆಯರು
ವಾರಾಂತ್ಯ ಬಂತೆಂದು ಕಾಡಿಗೊರಟರು

ಗಾಡಿ ತಂದ  ರಾಜು, ಕ್ಯಾಮೆರ ತೆಗೆದ ಸೀನು
ಊಟ, ತಿಂಡಿ, ಚಿಪ್ಸು ,ಬಾಟ್ಲಿ ಇಷ್ಟು ಸಾಲ್ದೇನು
ತಲೆಗೆ ಟೋಪಿ ಹಾಕಿ, ಬ್ಯಾಗನ್  ಗಾಡಿಗ್ ಬಿಸಾಕಿ
ಶಿಳ್ಳೆ ಹೊಡೆದು ಸೆಲ್ಫಿ  ತೆಗೆದು ಕಾಡಿಗೊರಟರು

ರಾಜು ಸೀನು ಮಾಣಿಯೆಂಬ ಜಾಲಿ ಗೆಳೆಯರು
ವಾರಾಂತ್ಯ ಬಂತೆಂದು ಕಾಡಿಗೊರಟರು


ಚಿರು ಯವ್ವನ ಸೌಂಧರ್ಯ , ನಿಶ್ಯಬ್ದದ ಆಂತರ್ಯ
ದಟ್ಟ  ಕಾನನದ ಬೇಲಿಯಲಿ ಮುಗಿಲೆತ್ತರಕ್ಕೆ ಬೆಳೆದ ಇಳೆಯಲಿ
ಧರೆಗೆ  ಝರಿ ಹರಿದುಬರೆ  ಹಸಿರ ನಡುವೆ ಕಾಲುದಾರಿ
ಏರಿ ತುತ್ತ ತುದಿಯ ಹಸಿರು ಹಾಸಿನ  ಸಾಲು, ತಲಪುವುದೇ ದೊಡ್ಡ ಸವಾಲು

ರಾಜು ಸೀನು ಮಾಣಿಯೆಂಬ ಜಾಲಿ ಗೆಳೆಯರು
ವಾರಾಂತ್ಯ ಬಂತೆಂದು ಕಾಡಿಗೊರಟರು

ಬ್ಯಾಕುಪ್ಯಾಕು ಹೊತ್ತು , ನಡುವೆ ಜಲಪಾತದಿ ಮಿಂದು
ಸಿಕ್ಕ  ಟೊಂಗೆ ಹಿಡಿದು, ಕೆಲುವುದ ಮುರಿದು ಕಂಡ ಫೋಟೊ ತೆಗೆದು
 ಚಡ್ಡಿ ಗೆಳೆಯರ ಈ ಗುಂಪು ಸಾಗುತಿದೆ ಮುಂದು
ಕಾಡಿನ ಅನನ್ಯ ಸೌಂಧರ್ಯದಲಿ ತೇಲುತಿದೆ ಇಂದು

ರಾಜು ಸೀನು ಮಾಣಿಯೆಂಬ ಜಾಲಿ ಗೆಳೆಯರು
ವಾರಾಂತ್ಯ ಬಂತೆಂದು ಕಾಡಿಗೊರಟರು

ತುದಿಯ  ತಲುಪಿ ಕೇಕೆ ಹಾಕಿ ಪಟವ  ನೆಟ್ಟರು
ಕುಡಿದು ತಿಂದು ತೇಗಿ ಹಾಡಿ ಮಜವ ಕಂಡರು
ಅಲ್ಲೇ ಬಾಟ್ಲಿ ಒಡೆದು, ಕೂಗಿ ಕಿರುಚಿ ನಲಿದು
ಇದ್ದ ಕಸವ ಅಲ್ಲೇ ಎಸೆದು ಮರಳಿ ಹೊರಟರು