ಶನಿವಾರ, ಅಕ್ಟೋಬರ್ 31, 2015

ಓಲೆಗಾರ

ಓಡುಲಿ(ಮೊಬೈಲ್ ) ಕರೆತುಂಬಿ ಮಿಣುಗುತಿದೆ ಗೊಣಗೊಣಿಸುತಿದೆ
ಅದರರಿವೇ ಇಲ್ಲದಂತೆ ಕಾಯಕ ಬಿರುಸನೆ ಸಾಗುತಿದೆ
ಜಗವನೇ ಮರೆಯುವಂತೆ ಮನ ತುಂಬಿದೆ ಕೆಲಸ
ದುಡಿಮೆಯೊಳಗೇ ಇವಳ ಸರಸ ವಿರಸ

ಗೋಪಾಲ ಓಲೆಗಾರನಂತೆ ಹಿಡಿತಂದನೊಂದೋಲೆ
ಇವಳ ಗೆಳೆಯರಿಬ್ಬರು ಬರೆದು ಕಳಸಿದ ಸುತ್ತೋಲೆ
ಇವಳ ಕಾಣದೆ ಅವರ ಮನಸು ಕುದಿಯುತಿತ್ತು
ಈ ಕೂಡಲೆ ಚಾ  ಅಂಗಡಿಗೆ ಬರಬೇಕೆಂದಿತ್ತು

ಹೆಸರಿರದ ಪತ್ರ ಕಂಡವಳಿಗಾಶ್ಚರ್ಯ
ಯಾರಿವರೀ ಗೆಳೆಯರೆಂದೆಂಬ ಕುತೂಹಲ
ಗೋಪಾಲನೆಂದೂ ಗೆಳೆಯರ ಗುಟ್ಟು ಹೊರಗಿಡನಿಹನೆಂದು
ನಡೆದೇ ಬಿಟ್ಟಳು ಚಾ ಅಂಗಡಿ ಕಡೆಗೆ

ಅರಿವಿನ  ಮುಖವೊಂದೂ ಕಾಣದೆಂ
ಶಪಿಸುತಲೇ ಕೆಟ್ಟ ಕೋಪದಿ ಕಂಡಳೀ ಗೋಪಾಲನ
ಮನವರಿತ ಗೋಪಾಲ ಅವರ ತಿಟವಿರುವುದೆಂದು ಸಲಹುತ
ದರ್ಶಕವ ತೆರೆಯಲು ಕಂಡರವರೀರ್ವರ ಪ್ರತಿಬಿಂಬ

ಬಿಂಬ ಪ್ರತಿಬಿಂಬಗಳ ನಡುವೆ ಗೆರೆಯೊಂದಿತ್ತು
ಈ ಪ್ರತಿಬಿಂಬ ಬಯಸಿದಂತೆ ಬದುಕ ಬಯಸಿತ್ತು
ಕೆಲಸದಿಂದಾಚೆ ಜನರೊಡಣೆ ಬೆರೆಯಬಯಸಿತ್ತು
ಕೂಡಲೇ ಈ  ಗೆರೆಯನಳಿಸುತ ಗೋಪಾಲನೊಡನೆ ಹರಟಲು ಎರಡು ಚಾ ಆರ್ಡರ್ ಮಾಡಿದಳು


ಶನಿವಾರ, ಅಕ್ಟೋಬರ್ 10, 2015

ಹೀಗೊಂದು ಗೆಳೆತನ

ಹೀಗೊಂದು ಗೆಳೆತನ
ಇದಕಿಲ್ಲ ಆಧುನಿಕತೆಯ ಸಿರಿತನ

ಕಿರುನಗುವಿನ ಸ್ವಾಗತ
ಕಣ್ಣೋಟದಲೇ  ಸಿಹಿಮಾತು
ಕಾಣದಿದ್ದರೆ ಮಾತ್ರ ಏನೋ ದುಗುಡ
ಇದು ಬಸ್ಸಿನಲ್ಲಿ ಪಯಣಿಸುವ ಅಪರಿಚಿತರ ಪರಿಚಯ

ಈ ಸ್ನೇಹಕೆ ಬೇಕಿಲ್ಲ ಜಂಗಮದ ಕೊಂಡಿ
ಅಂತರ್ಜಾಲವೆಂದೂ ಮಾಡದು ಸಂಧಿ
ಎಮ್  ಪೆಸರನೂ ಸರಿಯಾಗಿ ಅರಿಯದವರು
ಬಸ್ ಎಂಬ ಲೋಕದಲ್ಲಷ್ಟೇ ಚಿರಪರಿಚಿತರು

ಬದುಕ ಬಂಡಿಯ ಈ ಯಾನದೊಳು
ರಂಗ ತುಂಬುವರು ,ನಲಿವ ಹಂಚುವರು
ಅಡರು ತೊಡರಿನ ಈ ರಸ್ತೆಯಲಿ
ದಟ್ಟಣೆಯೊಡನೆ ಮಂದಗತಿಯಲಿ ಸಾಗುವ ನಮ್ಮೀ  ಯಾನದಲಿ

ಕಾಯುವಿಕೆಯ ಕಾವು ಇಲ್ಲೂ ಉಂಟು
ನಮ್ಮ ಬಂಡಿಗಾಗಿ,ಅವರ ಬರುವಿಗಾಗಿ
ಬರದಿದ್ದರೆ ಕಾವಿನ ಕಸುವು,ಕಾಯುತಲಿರುವುದು
ಭೂಮಿಯ ಮತ್ತೊಂದು ಸುತ್ತಿಗೆ,ಮತ್ತದೇ ಸಮಯಕೆ ಅವರ ಬರುವಿಕೆಗೆ

ಬಂಡಿಯಲ್ಲಿಯೇ ಇದರ ಉಗಮ ಇಲ್ಲಿಯೇ ಅಂತ್ಯ
ಇದರಾಚೆ ಮತ್ತದೇ ಜಂಗಮ ಅಂತರ್ಜಾಲದಿ ವಿಹರ
ಇವುಗಳಿಗಿಂತ ಬಲು ವಿಶಿಷ್ಟ ಈ ಗೆಳೆತನ
ಇದಕಿಲ್ಲ ಆಧುನಿಕತೆಯ ಸಿರಿತನ






ಮಂಗಳವಾರ, ಅಕ್ಟೋಬರ್ 6, 2015

ರಾಜಕುಮಾರಿ

ವರ್ಣಿಸಲೆತ್ನಿಸಿದೆ ನಾ ನಿನ್ನ
                                 ನನ್ನ ಬಿಳಿಯ ಪುಟದಲಿ
ಪದಗಳೇ ಸಿಗಲೊಲ್ಲವು
                                  ಈ ಕನ್ನಡ ನಿಘಂಟಿನಲಿ

ಚಲುವೆ ಎನ್ನೋಣವೆಂದರೆ ಶಿಲಾಬಾಲಿಕೆಯು ಚೆಲುವೆಂದರು
 ಸೌಂಧರ್ಯರಸದಿಂದ ಕಾಳಿದಾಸರು ಶಾಕುಂತಲೆಯ ಬರೆದರು
ಹೊಳೆಯುವ ನಕ್ಷತ್ರವೆನ್ನದಂತೆ ಆಗಸದಿ ಮಿಂಚುತಿವೆ ತಾರೆಗಳು
ಇವೆಲ್ಲವೂ ಮೀರಿಸಿದ ಈ ಸೌಂಧರ್ಯದ ದಾಸನಾದೆ ನಾನು
                                 ಪದಗಳಿಲ್ಲದೆ ಪರಿತಪಿಸಿದೆ ನಾನು

ಭೋರ್ಗೆರೆಯುವ ಜಲಪಾತ ರಮಣೀಯವೆಂದರು
ಕೆಂಪನೆ ಚೆಂಡಿನ ಸೂರ್ಯಸ್ತದ ಸವಿ ಸವಿದರು
ಶಿಖರವೆನ್ನೇರಿ ವನ ಸೌಂಧರ್ಯ ಕಂಡರು
ಆದರೆ ಇವೆಲ್ಲವ ಮರೆಯುವಂತೆ ಮಾಡಿವೆ
                                 ನಿನ್ನೀ ಮುತ್ತಿನ  ನೇತ್ರಗಳು


ನೀನಾಡಿದ ಮಾತುಗಳೇ ಶೃಂಗಾರ ಕಾವ್ಯ
ನೀನಿಟ್ಟ ಹೆಜ್ಜೆ ನೃತ್ಯ ರೂಪಕ
ನೀ ನಡೆದ ಹಾದಿಯೇ ಎನ್ನ ರಾಜಮಾರ್ಗ
ನಿನ್ನೀ ನಗುವೇ ಈ ಜಗಕೆ  ಪ್ರೇಮ ಚುಂಬನ

ಎಷ್ಟು ಬಣ್ಣಿಸಿದರೂ ಮುಗಿಯದೀ ವರ್ಣನೆ
ರೂಪಕ ಸಿಗದು ಮಾಡಿದರೂ ಚಿಂತನೆ
ಕವಿಗಳಿಗೇ ಸವಾಲಾಗಿದ್ದಾಳೆ ಈ ರಾಜಕುಮಾರಿ
ಬಿಡಿಸಲಾಗದ ಒಗಟು , ನನ್ನ ಬಾಳರುವಾರಿ